ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಪ್ರಧಾನ ಕಚೇರಿ ಆವರಣದಲ್ಲಿ 7ನೇ ರಾಷ್ಟ್ರೀಯ ಜನೌಷಧಿ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಜನೌಷಧಿ ಪ್ರಾರಂಭವಾಗಿ 8 ವರ್ಷವಾಗಿದೆ. ಟಿ.ಎಸ್.ಎಸ್. ಆಸ್ಪತ್ರೆಯಲ್ಲಿ ಕೂಡ ಜನೌಷಧಿ ಸೂಚನೆ ನೀಡಿದ್ದೇವೆ. ಸಂಘದಲ್ಲಿ ಸದಸ್ಯರ ಆರೋಗ್ಯಕ್ಕೆ ಸ್ಪಂದಿಸುವ ರೈತ ರಕ್ಷಾ ಕವಚ ಯೋಜನೆ ಜಾರಿಯಲ್ಲಿದ್ದು ಸಾಕಷ್ಟು ಸಹಾಯವಾಗಿದೆ ಎಂದು ಹೇಳುವುದರೊಂದಿಗೆ, ರೈತರ ಬೆಳೆ ವಿಮೆ ಮಂಜೂರಾತಿಗೆ ಸಹಕರಿಸಿದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಗೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ಔಷಧಿಗಳ ಲಭ್ಯತೆಗೆ ಜನೌಷಧಿ ಪ್ರಾರಂಭಿಸಲು ಪ್ರಮುಖ ಕಾರಣೀಕರ್ತರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಜೆ.ಪಿ.ನಡ್ಡಾ ಇವರಿಗೆ ಧನ್ಯವಾದ ಸಮರ್ಪಿಸಿ ಜನತೆಗೆ ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿ ಶುಭಾಶಯ ಕೋರಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ 28, ರಾಜ್ಯದಲ್ಲಿ 1500 ಹಾಗೂ ದೇಶದಲ್ಲಿ 18000 ಮಳಿಗೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಯುವ ಜನರು ಜನೌಷಧಿ ಮಳಿಗೆ ತೆರೆದು ಸ್ವಾವಲಂಬಿ ಜೀವನ ನಡೆಸಲು ಕರೆಕೊಟ್ಟರು. ಕೇಂದ್ರ ಸರಕಾರ ದೇಶದ 140 ಕೋಟಿ ಜನರ ಆರೋಗ್ಯದ ವಿಷಯವಾಗಿ ಏನೆಲ್ಲ ಪ್ರಯತ್ನಗಳನ್ನು ನಡೆಸಿ ಕರೋನಾದಂತ ರೋಗಕ್ಕೆ ಉಚಿತ ಲಸಿಕೆ ವಿತರಿಸಿ ಜನರ ಜೀವ ರಕ್ಷಣೆಗೆ ನಿಂತ ಪರಿವಿವರಿಸಿದರು. ಕೇಂದ್ರ ಸರಕಾರ ಸಾಮಾನ್ಯ ಜನರಿಗೋಸ್ಕರ ಪ್ರಾರಂಭಿಸಿದ ಹಲವಾರು ಯೋಜನೆಗಳ ಕುರಿತು ಬೆಳಕು ಚೆಲ್ಲಿದರು. ಇಂದು “ದಾಮ್ ಕಮ್ ದವಾಯಿ ಉತ್ತಮ್” ಅಂದರೆ ಕಡಿಮೆ ದರದಲ್ಲಿ ಉತ್ತಮ ಔಷಧಿ ಎಂಬ ಘೋಷವಾಕ್ಯದೊಂದಿಗೆ ದೇಶಾದ್ಯಂತ ರಾಷ್ಟ್ರೀಯ ಜನೌಷಧಿ ದಿವಸ್ ಆಚರಿಸುತ್ತಿರುವ ವಿಚಾರ ತಿಳಿಸಿ ಸರಕಾರದ ಯೋಜನೆಗಳ ಪ್ರಯೋಜನ ಲಭ್ಯವಾಗುವಂತೆ ಸದಾ ಶ್ರಮಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಶಿರಸಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶರ್ಮಿಲಾ ಮಾದನಗೇರಿ, ಉಪಾಧ್ಯಕ್ಷರಾದ ರಮಾಕಾಂತ ಭಟ್ಟ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ವಿನಾಯಕ ಭಟ್ಟ, ಹಾಗೂ ಡಾ. ನೇತ್ರಾವತಿ, ಕೇಂದ್ರ ಸರಕಾರದಿಂದ ಜನೌಷಧಿ ಪ್ರಭುತ್ರ ಪ್ರಶಸ್ತಿ ಪುರಸ್ಕೃತರಾದ ಕೆ.ವಿ.ನಾಗರಾಜ, ಸಹಾಯಕ ಔಷಧ ನಿಯಂತ್ರಕರು, ಉತ್ತರ ಕನ್ನಡ ಜಿಲ್ಲೆ, ಟಿ.ಎಸ್.ಎಸ್. ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು, ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಸದಸ್ಯರು, ಗ್ರಾಹಕರು, ಸಿಬ್ಬಂದಿಗಳು, ಪತ್ರಕಾ ವರದಿಗಾರರು, ಪ್ರಾಥಮಿಕ ಸಹಕಾರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಿ.ಎಸ್.ಎಸ್ ಸಿಬ್ಬಂದಿ ಉದಯ ಹೆಗಡೆ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಎಂ.ಎನ್ ಭಟ್ಟ ತೋಟಿಮನೆ ಸ್ವಾಗತಿಸಿದರು. ನಿರ್ದೇಶಕರಾದ ರವೀಂದ್ರ ಹೆಗಡೆ ಹಳದೋಟ ವಂದಿಸಿದರು. ನೌಕರ ಗೋಪಾಲ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಟಿಎಸ್ಎಸ್ನಲ್ಲಿ ರಾಷ್ಟ್ರೀಯ ಜನೌಷಧಿ ದಿವಸ್ ಆಚರಣೆ
